fbpx
Karnataka News

ಪೀರನವಾಡಿಯಲ್ಲಿ ಸುಂದರ, ಭವ್ಯ ಗಾಂಧಿ ಭವನ ನಿರ್ಮಾಣ: ಲೋಕಾರ್ಪಣೆಗೊಳಿಸಿದ ಸಚಿವ ಗೋವಿಂದ ಕಾರಜೋಳ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಬೆಳಗಾವಿಯ ಪೀರನವಾಡಿಯಲ್ಲಿ ನಿರ್ಮಿಸಲಾಗಿರುವ ಅತ್ಯಂತ ಸುಂದರ ಹಾಗೂ ಭವ್ಯವಾದ ಗಾಂಧಿ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಲೋಕಾರ್ಪಣೆಗೊಳಿಸಿದರು.

ಪೀರನವಾಡಿಯ ಹಚ್ಚ ಹಸುರಿನ ಪ್ರದೇಶದಲ್ಲಿ ಎರಡು ಎಕರೆ ಜಾಗೆಯಲ್ಲಿ ಭವ್ಯವಾದ ಗಾಂಧೀ ಭವನವನ್ನು ನಿರ್ಮಿಸಲಾಗಿದೆ. ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಯನ್ನು ಹಾಗೂ ಬದುಕಿನ ಮೌಲ್ಯವನ್ನು ತಿಳಿಸಲು ಅನುಕೂಲವಾಂತಹ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಮಹತ್ತರ ಉದ್ಧೇಶದಿಂದ ಗಾಂಧೀ ಭವನವನ್ನು ನಿರ್ಮಿಸಲಾಗಿದೆ.

ಮೂರೂ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿಯ ನಿರ್ಮಿತಿ ಕೇಂದ್ರವು ನಿರ್ಮಿಸಿರುವ ಈ ಭವನದಲ್ಲಿ ಧ್ಯಾನ, ಪ್ರಾರ್ಥನೆಗೆ ಅನುಕೂಲವಾಗುವಂತೆ ಒಂದು ನೂರಕ್ಕೂ ಹೆಚ್ಚು ಜನರು ಕುಳಿತುಕೊಳ್ಳಬಹುದಾದ ಸಭಾಂಗಣವಿದೆ. ಗಾಂಧೀಜಿಯವರ ಹೋರಾಟದ ಬದುಕು, ಸತ್ಯದ ಅನ್ವೇಷಣೆ, ಅಹಿಂಸಾ ಮಾರ್ಗದ ಜೀವನದ ವಿವಿಧ ಮಗ್ಗುಲುಗಳನ್ನು ಡಿಜಿಟಲ್ ಡಿಜಿಟಲ್ ಮಾಧ್ಯಮದ ಮೂಲಕ ಪರಿಚಯಿಸುವುದಕ್ಕಾಗಿ ಪ್ರದರ್ಶನ ಕೊಠಡಿಯನ್ನು ನಿರ್ಮಿಸಲಾಗಿದೆ.

ಇದಲ್ಲದೇ ಮಹಾತ್ಮಾ ಗಾಂಧೀಜಿಯವರ ಸಮಗ್ರ ಜೀವನದ ಮೇಲೆ ಬೆಳಕು ಚೆಲ್ಲುವಂತಹ ಪುಸ್ತಕಗಳು ಮತ್ತು ಸಂಶೋಧನಾ ಕೃತಿಗಳನ್ನು ಜನರಿಗೆ ಸುಲಭವಾಗಿ ಒಂದೇ ಕಡೆ ದೊರಕುವಂತಾಗಲು ನೂತನ ಗಾಂಧೀ ಭವನದಲ್ಲಿ ಕಿರು ಗ್ರಂಥಾಲಯವನ್ನು ಸ್ಥಾಪಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಭವನದ ಹೊರ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಧ್ಯಾನಸ್ಥ ಬೃಹತ್ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಪ್ರವೇಶ ದ್ವಾರದ ಎದುರಿನಲ್ಲಿ ಇನ್ನೊಂದು ಕಂಚಿನ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಆವರಣದ ಇನ್ನೊಂದು ಬದಿಯಲ್ಲಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ದಂಡಿ ಯಾತ್ರೆಯ ದೃಶ್ಯವನ್ನು ಪ್ರತಿಬಿಂಬಿಸುವ ಆಕರ್ಷಕ ಪುತ್ಥಳಿಗಳನ್ನು ನಿರ್ಮಿಸಲಾಗಿದೆ.

ಈ ಸುಂದರ ಗಾಂಧಿ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು.ಮುಂಬರುವ ದಿನಗಳಲ್ಲಿ ಡಿಜಿಟಲ್ ಪ್ರದರ್ಶನ ಕೊಠಡಿ ಹಾಗೂ ಗ್ರಂಥಾಲಯವನ್ನು ಆರಂಭಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ತಿಳಿಸಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲಿ ಗಾಂಧೀ ಭವನ ಸ್ಥಾಪಿಸುವ ಮೂಲಕ ಮಹಾತ್ಮ ಗಾಂಧೀಜಿಯವರ ಜೀವನಸಾಧನೆಗಳ ಕುರಿತು ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂಬ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಭವನಗಳನ್ನು ನಿರ್ಮಿಸುತ್ತಿದೆ.

ದಾವಣಗೆರೆ ಜಿಲ್ಲೆಯ ಗಾಂಧೀ ಭವನವನ್ನು ಕೇಂದ್ರ ಗೃಹ ಇಲಾಖೆಯ ಸಚಿವರಾದ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಲೋಕಾರ್ಪಣೆಗೊಳಿಸಿರುತ್ತಾರೆ. ಅದೇ ರೀತಿ ಬಳ್ಳಾರಿ, ಧಾರವಾಡ ಮತ್ತಿತರ ಜಿಲ್ಲೆಗಳಲ್ಲಿ ಗಾಂಧೀ ಭವನ ನಿರ್ಮಾಣ ಕಾರ್ಯ ನಡೆದಿದೆ. ಅಭಿವೃದ್ಧಿಯ ಹರಿಕಾರ ಎಂದೇ ಕರೆಯಲ್ಪಡುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಅವರ ಮುತುವರ್ಜಿಯಿಂದ ಸುಂದರವಾದ ಗಾಂಧೀ ಭವನ ಕಟ್ಟಡದ ಕಾಮಗಾರಿಯು ಪೂರ್ಣಗೊಂಡು ಇದೀಗ ಉದ್ಘಾಟನೆಯಾಗಿದೆ.

 

ಉದ್ಘಾಟಿಸಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಅವರು ಅಭಯ್ ಪಾಟೀಲ್ ಅವರ ಪ್ರಯತ್ನ ಮತ್ತು ಮುಂದಾಲೋಚನೆಯಿಂದ ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಮೂರ್ತಿ, ಗಾಂಧಿ ಭವನ, ಸುಂದರ ಉದ್ಯಾನವನ ವಾರ್ತಾ ಇಲಾಖೆಯ ಸಹಯೋಗದಲ್ಲಿ ನಿರ್ಮಾಣ ಆಗಿವೆ. ಈ ಮಹತ್ಕಾರ್ಯಕ್ಕೆ ಅಭಯ್ ಪಾಟೀಲ್‍ರನ್ನು ನಾನು ಅಭಿನಂದಿಸುತ್ತೇನೆ. ಪ್ರತಿಯೊಬ್ಬ ಶಾಸಕರು ಅವರ ಅಧಿಕಾರವಧಿಯಲ್ಲಿ ಮಾಡಿದ ಕೆಲಸಗಳು ಮುಂದಿನ ಜನಾಂಗಕ್ಕೆ ಹೆಜ್ಜೆ ಗುರುತಾಗಿ ಉಳಿಯಬೇಕು. 1 ಸಾವಿರ ಕೋಟಿ ವೆಚ್ಛದಲ್ಲಿ ಬೆಳಗಾವಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದೇ ರೀತಿ ಪ್ರತಿಯೊಬ್ಬ ಶಾಸಕರು ತಮ್ಮ ನಗರ ಹಾಗೂ ಕ್ಷೇತ್ರದಲ್ಲಿ ಕೆಲಸ ಮಾಡಿ ರಾಜ್ಯವನ್ನು ಉತ್ತಮ ಹಾಗೂ ಸುಂದರ ರಾಜ್ಯವನ್ನಾಗಿ ಮಾಡಬೇಕು. ಅಭಿವೃದ್ಧಿ ಕೆಲಸ ಮಾಡುವುದರಲ್ಲಿ ಅಭಯ್ ಪಾಟೀಲ್‍ರು ಅತ್ಯಂತ ಕ್ರಿಯಾಶೀಲರು, ಎಲ್ಲರಿಗೂ ಕೂಡ ಆದರ್ಶ ಎಂದು ಶ್ಲಾಘಿಸಿದರು.

ಪೀರನವಾಡಿಯಲ್ಲಿನ ಪ್ರಶಾಂತವಾದ ಸ್ಥಳದಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಸುಂದರವಾದ ಗಾಂಧೀ ಭವನವನ್ನು ನಿರ್ಮಿಸಲಾಗಿದೆ. ಈ ಭವನದಲ್ಲಿ ವರ್ಷವಿಡೀ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಅವರ ಆಶಯವಾಗಿದೆ.

 

ಕಾರ್ಯಕ್ರಮದಲ್ಲಿ ಚನ್ನಮ್ಮ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ಡಿಸಿ ನಿತೇಶ್ ಪಾಟೀಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ಇನ್ನಿತರ ಗಣ್ಯರು, ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: