ಗ್ರಾಮೀಣ ಭಾಗದಲ್ಲಿ ಕಲ್ಯಾಣ ಮಂಟಪ, ಸಮುದಾಯ ಭವನಗಳಿಗೆ ಹೆಚ್ಚಿನ ಬೇಡಿಕೆ – ಚನ್ನರಾಜ ಹಟ್ಟಿಹೊಳಿ

ಬೆಳಗಾವಿ -ಸುಳೇಭಾವಿ ಗ್ರಾಮದ ಶ್ರೀ ಶಾಕಾಂಭರಿ ದೇವಿ ದೇವಸ್ಥಾನದ ಕಲ್ಯಾಣ ಮಂಟಪದ ಮೇಲ್ಚಾವಣಿ ಕಾಂಕ್ರೀಟ್ (ಸ್ಲ್ಯಾಬ್ ಭರಣಿ) ಹಾಕುವ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪೂಜೆಯನ್ನು ನೆರವೇರಿಸಿದರು.
ಗ್ರಾಮೀಣ ಭಾಗದಲ್ಲಿ ಸಮುದಾಯ ಭವನ, ಕಲ್ಯಾಣ ಮಂಟಪಗಳನ್ನು ನಿರ್ಮಿಸಿದರೆ ಸದುಪಯೋಗವಾಗುತ್ತವೆ. ಹಾಗಾಗಿ ನೂರಾರು ಹಳ್ಳಿಗಳಲ್ಲಿ ಜನರ ಬೇಡಿಕೆಯ ಮೇರೆಗೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ ಎಂದು ಚನ್ನರಾಜ ಹೇಳಿದರು.
ಪೇಟೆ ಪಟ್ಟಣಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವ ಸಭಾಗೃಹಗಳು, ಕಲ್ಯಾಣ ಮಂಟಪಗಳು ಸಾಕಷ್ಟು ಲಭ್ಯವಾಗುತ್ತವೆ. ಹಳ್ಳಿಗರು ತಮ್ಮ ತಮ್ಮ ಊರುಗಳಲ್ಲೇ ಕಾರ್ಯಕ್ರಮ ನಡೆಸಲು, ಮದುವೆ , ಮುಂಜಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಉತ್ತಮ ಸೌಕರ್ಯಗಳಿರುವ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳ ಅಗತ್ಯತೆ ಇದೆ. ಇದರ ನಿರ್ವಹಣೆ ಮತ್ತು ಬಳಕೆ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ದೇವಸ್ಥಾನದ ಟ್ರಸ್ಟ್ ಕಮೀಟಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.