ಇವಿ ವಾಹನಗಳ ಬೆಂಕಿಗೆ ಕಾರಣವೇನು? ಸಮಿತಿಯು ಕಂಡುಕೊಂಡ ಆತಂಕಕಾರಿ ಅಂಶಗಳು ಇಲ್ಲಿವೆ.

ವಿದ್ಯುತ್ಚಾಲಿತ ದ್ವಿಚಕ್ರ ವಾಹನಗಳು ತನ್ನಿಂತಾನೇ ಬೆಂಕಿ ಹತ್ತಿಕೊಂಡು ಉರಿದಂತಹ ಸರಣಿ ಪ್ರಕರಣಗಳು ಇತ್ತೀಚೆಗೆ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಇಂಥ ದುರ್ಘಟನೆಗಳ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿತ್ತು.
ಸಮಿತಿಯು ಕಂಡುಕೊಂಡ ಆತಂಕಕಾರಿ ಅಂಶಗಳು ಇಲ್ಲಿವೆ.
ತಜ್ಞರ ಸಮಿತಿ ಕಂಡುಕೊಂಡಿದ್ದೇನು?
– ಅತಿಯಾಗಿ ಬಿಸಿಯಾಗುವಂಥ ಬ್ಯಾಟರಿಗಳಿಗೆ ಶಕ್ತಿಯನ್ನು ಹೊರಸೂಸಲು “ವಾತಾಯನ’ ವ್ಯವಸ್ಥೆ ಇಲ್ಲ
– ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಲ್ಲಿ ಗಂಭೀರ ಲೋಪಗಳಿವೆ
– ಕೆಲವು ವಾಹನಗಳಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಬ್ಯಾಟರಿಗಳನ್ನು ಬಳಸಲಾಗಿದೆ
– ಮೂಲಭೂತ ಸುರಕ್ಷತಾ ವ್ಯವಸ್ಥೆಯನ್ನೂ ಕಂಪನಿಗಳು ಕಲ್ಪಿಸಿಲ್ಲ
– ಸುರಕ್ಷತೆಗೆ ಆದ್ಯತೆ ನೀಡುವ ಬದಲು ಶಾರ್ಟ್ಕಟ್ ರೂಟ್ಗಳನ್ನು ಬಳಸಲಾಗಿದೆ
ವಾತಾಯನ ವ್ಯವಸ್ಥೆ ಇದ್ದರೆ…
ಬ್ಯಾಟರಿಗಳು ಅತಿಯಾಗಿ ಬಿಸಿಯಾದಾಗ ಒಳಗೆ ಅನಿಲರೂಪದ ಒತ್ತಡ ಸೃಷ್ಟಿಯಾಗುತ್ತದೆ. ವಾಹನವು ಸಂಚರಿಸುವ ವೇಳೆ ಆ ಒತ್ತಡವು ಅಲ್ಲೇ ಇದ್ದು, ಅದು ತೀವ್ರಗೊಂಡಾಗ ಬ್ಯಾಟರಿ ಸ್ಫೋಟಗೊಂಡು ಬೆಂಕಿ ಹತ್ತಿಕೊಳ್ಳುತ್ತದೆ. ಆದರೆ, ಇಲ್ಲಿ ವಾತಾಯನ ವ್ಯವಸ್ಥೆಯಿದ್ದರೆ, ಅನಿಲದ ಒತ್ತಡವು ಆ ವ್ಯವಸ್ಥೆಯ ಮೂಲಕ ಹೊರಹೋಗುತ್ತದೆ. ಹಾಗಾಗಿ ಅಪಾಯ ಉಂಟಾಗುವುದಿಲ್ಲ. ಆದರೆ, ವಿದ್ಯುತ್ಚಾಲಿತ ದ್ವಿಚಕ್ರ ವಾಹನಗಳ ಬ್ಯಾಟರಿಗಳಲ್ಲಿ ವಾತಾಯನ ವ್ಯವಸ್ಥೆ ಇಲ್ಲದಿರುವುದೇ ಅವಘಡಗಳಿಗೆ ಕಾರಣ ಎಂದು ಸಮಿತಿ ಹೇಳಿದೆ.
ಸರ್ಕಾರದ ಸೂಚನೆ
– ಸಮಿತಿ ನೀಡಿರುವ ಸಲಹೆಗಳನ್ನು ಸರ್ಕಾರವು ಆಯಾ ಕಂಪನಿಗಳಿಗೆ ರವಾನೆ. ಸೂಕ್ತ ಕ್ರಮಗಳಿಗೆ ಸೂಚನೆ.
– ನಿಮ್ಮ ವಿರುದ್ಧ ಏಕೆ ನಾವು ಕಾನೂನು ಕ್ರಮ ಕೈಗೊಳ್ಳಬಾರದು ಎಂದೂ ಪ್ರಶ್ನಿಸಿದೆ
ಆಗಸ್ಟ್ನಲ್ಲಿ ಮಾರ್ಗಸೂಚಿ
ಸಾರಿಗೆ ಸಚಿವಾಲಯವು ವಿದ್ಯುತ್ಚಾಲಿತ ವಾಹನ ತಯಾರಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಗಿಗೊಳಿಸುತ್ತಿದೆ. ಇದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಿದೆ. ಸಮಿತಿಯು ಆಗಸ್ಟ್ನೊಳಗಾಗಿ ಅಂತಿಮ ಮಾರ್ಗಸೂಚಿಗಳನ್ನು ಹೊರಡಿಸಲಿದೆ.