ಹರ್ಷನ ಹತ್ಯೆ ಕೇಸ್: ಶಿವಮೊಗ್ಗದ 18 ಕಡೆ ಎನ್ಐಎ ಅಧಿಕಾರಿಗಳಿಂದ ತನಿಖೆ

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎನ್ಐಎ(ರಾಷ್ಟ್ರೀಯ ತನಿಖಾ ದಳ) ಗುರುವಾರ ಶಿವಮೊಗ್ಗದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿತು.
ಎನ್ಐಎ ಇನ್ಸ್ಪೆಕ್ಟರ್ ಷಣ್ಮುಗಂ ನೇತೃತ್ವದಲ್ಲಿ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ಒಟ್ಟು 90 ಅಧಿಕಾರಿಗಳು 8 ತಂಡಗಳಾಗಿ ಗುರುವಾರ ಬೆಳಗ್ಗೆಯಿಂದ ತನಿಖೆ ಕೈಗೊಂಡರು.
ಹರ್ಷನ ಕೊಲೆ ನಡೆದ ಸ್ಥಳ, ಆತನ ನಿವಾಸ, ಆತ ಓಡಾಡುತ್ತಿದ್ದ ಸ್ಥಳ, ಆರೋಪಿಗಳು ಬಾಯ್ಬಿಟ್ಟಿರುವ ಸ್ಥಳ, ಹತ್ಯೆಗೆ ಸ್ಕೆಚ್ ರೂಪಿಸಿದ್ದ ಸ್ಥಳ, ಆರೋಪಿಗಳು ಶೆಲ್ಟರ್ ಪಡೆದ ಸ್ಥಳ ಹಾಗೂ ಘಟನೆಯ ಪೂರ್ವಾಪರದ ಸ್ಥಳ ಸೇರಿ 18 ಕಡೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಎರಡು ತಿಂಗಳ ಹಿಂದೆಯೂ ಶಿವಮೊಗ್ಗಕ್ಕೆ ಎನ್ಐಎ ಅಧಿಕಾರಿಗಳು ಬಂದಿದ್ದರು. ಇದೀಗ ಮತ್ತೊಮ್ಮೆ ಆಗಮಿಸಿದ್ದಾರೆ. ಕರ್ನಾಟಕದ ಅಧಿಕಾರಿಗಳಿಗೆ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಜತೆಗೆ ಸ್ಥಳೀಯ ಪೊಲೀಸರ ಸಹಕಾರ ಪಡೆದಿರುವ ಅಧಿಕಾರಿಗಳು ಮಹತ್ವದ ಅಂಶಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.
ತನಿಖೆ ಬಗ್ಗೆ ಹೆಚ್ಚಿದ ಕುತೂಹಲ: ಫೆ.20ರಂದು ಹರ್ಷನ ಕೊಲೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿದ್ದು, ಈಗಾಗಲೇ ಎರಡು ಬಾರಿ ಎನ್ಐಎ ಅಧಿಕಾರಿಗಳು ಶಿವಮೊಗ್ಗಕ್ಕೆ ಬಂದು ಹೋಗಿದ್ದರು. ಇದೀಗ 3ನೇ ಬಾರಿ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ.