ಕೋಡಿಹಳ್ಳಿ ಚಂದ್ರಶೇಖರ್ ಹಸಿರು ಶಾಲು ಧರಿಸಬಾರದು

ದಾವಣಗೆರೆ, ಜುಲೈ 1: ಆರೋಪ ಮುಕ್ತರಾಗಿ ಬರುವವರೆಗೂ ಕೋಡಿಹಳ್ಳಿ ಚಂದ್ರಶೇಖರ್ ಹಸಿರು ಶಾಲು ಧರಿಸಬಾರದು. ಎರಡು ಹೋರಾಟಗಳಲ್ಲಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಮುಕ್ತರಾಗುವವರೆಗೆ ರೈತ ಸಂಘದ ಘನತೆಯ ಚಿಹ್ನೆಯ ವಸ್ತ್ರವನ್ನು ಹಾಕಿಕೊಳ್ಳಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಹೆಚ್.
ಆರ್. ಬಸವರಾಜಪ್ಪ ಆಗ್ರಹಿಸಿದರು.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎರಡು ಪ್ರಮುಖ ಹೋರಾಟಗಳಾದ ಕೆಎಸ್ ಆರ್ ಟಿಸಿ ಮುಷ್ಕರ ನಿಲ್ಲಿಸಲು 35 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೂರು ಕೃಷಿ ಕಾಯ್ದೆ ವಿರುದ್ಧದ ಹೋರಾಟ ನಿಲ್ಲಿಸಲು 2500 ಸಾವಿರ ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದರು ಎಂದು ಸುದ್ದಿ ವಾಹಿನಿಯೊಂದರಲ್ಲಿ ಸ್ಟಿಂಗ್ ಆಪರೇಷನ್ ಮೂಲಕ ಕೋಡಿಹಳ್ಳಿ ವಿರುದ್ಧ ಆರೋಪಿಸಲಾಗಿತ್ತು.
ಆದರೆ ಕೋಡಿಹಳ್ಳಿ ಚಂದ್ರಶೇಖರ್ ಇದುವರೆಗೆ ಈ ಆರೋಪಗಳನ್ನು ಅಲ್ಲಗಳೆಯುವ ಪ್ರಯತ್ನ ಮಾಡದಿರುವುದನ್ನು ನೋಡಿದರೆ, ಅವರು ಆರೋಪಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ತೋರಿಸುತ್ತದೆ ಎಂದರು.
By ದಾವಣಗೆರೆ ಪ್ರತಿನಿಧಿ
ಕೋಡಹಳ್ಳಿ ತಪ್ಪುಮಾಡದಿದ್ದರೆ ತನಿಖೆಗೆ ಒತ್ತಾಯಿಸಬೇಕಿತ್ತು
ನಂಜುಂಡಸ್ವಾಮಿ ಹಾಗೂ ಅನೇಕ ಹಿರಿಯ ರೈತ ಮುಖಂಡರು ಕಟ್ಟಿರುವ ಈ ಸಂಘ ಅನೇಕ ಹೋರಾಟಗಳ ಮೂಲಕ ತ್ಯಾಗ, ಬಲಿದಾನ ಮಾಡಿರುವ ಸಂಘಟನೆಯಾಗಿದೆ. ಇಂತಹ ರೈತ ಸಂಘಟನೆಗೆ ಅವರು ಅಪಖ್ಯಾತಿ ತಂದಿದ್ದಾರೆ. ಕೋಡಿಹಳ್ಳಿಗೆ ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇದ್ದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಒತ್ತಾಯಿಸಿ ಬೇಕಿತ್ತು. ಆರೋಪಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ. ಇದೆಲ್ಲಾ ನೋಡಿದರೆ ಪರೋಕ್ಷವಾಗಿ ಈ ಆರೋಪಗಳನ್ನು ಅವರು ಒಪ್ಪಿಕೊಂಡಂತಿದೆ ಎಂದರು.
ತನಿಖೆ ಮುಗಿಯವವರೆಗೆ ಹಸಿರು ಶಾಲನ್ನು ತೊಡಬಾರದು
ರೈತಸಂಘದ ರಾಜ್ಯ ಪದಾಧಿಕಾರಿಗಳು ಸಭೆ ಕರೆದು, ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಭೆಯು ಒಮ್ಮತದಿಂದ ಚಂದ್ರಶೇಖರ್ ರನ್ನು ವಜಾ ಮಾಡಿದೆ. ಸಂಯುಕ್ತ ಕಿಸಾನ್ ಹೋರಾಟ ಸಂಘಟನೆಯ ಸಂಚಾಲಕ ಸ್ಥಾನದಿಂದಲೂ ಕೋಡಿಹಳ್ಳಿಯವರನ್ನು ವಜಾ ಮಾಡಲಾಗಿದೆ. ರಾಜ್ಯಾಧ್ಯಕ್ಷರಾಗಿದ್ದ ಕೋಡಿಹಳ್ಳಿ ಸಾಲಮನ್ನಾ ಸೇರಿದಂತೆ ಯಾವುದೇ ಲೆಕ್ಕಪತ್ರಗಳನ್ನು ಇದುವರೆಗೆ ಸಲ್ಲಿಸಿಲ್ಲ. ಅವರು ಕೂಡಲೇ ಲೆಕ್ಕಪತ್ರ ನೀಡಬೇಕು. ತನಿಖೆ ಮುಗಿದು ಅವರು ಆರೋಪ ಮುಕ್ತರಾಗುವವರೆಗೆ ಹಸಿರು ಶಾಲನ್ನು ಧರಿಸಬಾರದು ಎಂದು ಬಸವರಾಜಪ್ಪ ಆಗ್ರಹಿಸಿದರು.
ಈಗಾಗಲೇ ನಮ್ಮ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಚಿಕ್ಕಸ್ವಾಮಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, ವರದಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಎಲ್ಲಾ ಸಂಘಟನೆಗಳು ಒಂದಾಗಿ ರೈತರ ಸಮಸ್ಯೆ ಪರಿಹಾರ
ನಾನು ರಾಜ್ಯಾಧ್ಯಕ್ಷನಾದ ಮೇಲೆ ಎಲ್ಲಾ ರೈತ ಸಂಘಟನೆಗಳು ಒಂದಾಗುವ ಆಸಕ್ತಿ ತೋರಿದ್ದು, ನಾವೆಲ್ಲರೂ ಒಂದಾಗಲಿದ್ದೇವೆ. ಅನೇಕ ಸಂಘಟನೆಗಳ ಮುಖಂಡರು ನಮಗೆ ಕರೆ ಮಾಡಿ ಮಾತನಾಡಿ, ತಮ್ಮ ಜಿಲ್ಲೆಗಳಿಗೆ ನಮಗೆ ಆಹ್ವಾನ ನೀಡಿದ್ದಾರೆ. ಎಲ್ಲಾ ಸಂಘಟನೆಗಳು ಒಂದಾಗಿ ಒಗ್ಗಟ್ಟಿನಿಂದ ಮುಂದೆ ಸಾಗಿ, ರೈತರು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಕಾಳಸಂತೆಯಲ್ಲಿ ಗೊಬ್ಬರ ಮಾರಾಟ
ರಾಜ್ಯದಲ್ಲಿ ರಸಗೊಬ್ಬರ ಅಭಾವ ತಲೆದೋರಿದ್ದು, ಕಾಳಸಂತೆಯಲ್ಲಿ ಗೊಬ್ಬರ ಮಾರಾಟವಾಗುತ್ತಿದೆ ಎಂದು ತಿಳಿದು ಬಂದಿದೆ. ಮಳಿಗೆ ಮುಂದೆ ಬೋರ್ಡ್ನಲ್ಲಿ ಸ್ಟಾಕ್ ಎಷ್ಟಿದೆ ಎಂದು ತೋರಿಸಬೇಕು. ದರಪಟ್ಟಿ ಹಾಕಬೇಕು. ಹಾಗೂ ರೈತ ಫಸಲ್ ಭೀಮಾ ಯೋಜನೆಯಲ್ಲಿ ಬಹಳಷ್ಟು ಲೋಪದೋಷ ಗಳಿದ್ದು, ಅದನ್ನು ಸರಿಪಡಿಸಬೇಕಿದೆ. ಜಿಲ್ಲೆಯಲ್ಲಿ ಕಛೇರಿಗಳನ್ನು ತೆರೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಎಷ್ಟೇ ಹೋರಾಟ ನಡೆಸಿದರೂ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಇದುವರೆಗೂ ಹಿಂಪಡೆದಿಲ್ಲ. ನಾವು ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ಈ ಕಾಯ್ದೆಗಳನ್ನು ರದ್ದುಗೊಳಿಸೋಣ ಎಂದು ರೈತರಿಗೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಕುರುವ ಗಣೇಶ್, ಈಚಗಟ್ಟದ ಸಿದ್ಧವೀರಪ್ಪ, ಅಂಬಳ್ಳಿ ಶಿವಪ್ಪ, ನಜೀರ್ ಸಾಬ್ ಮೂಲಿಮನೆ, ಹೊನ್ನೂರು ಮುನಿಯಪ್ಪ, ಭರಮಣ್ಣ, ಕೆಂಚನಾಯ್ಕ, ರಾಜಾನಾಯ್ಕ ಮತ್ತಿತರರು ಹಾಜರಿದ್ದರು.