PSI ಹುದ್ದೆಗಳ ನೇಮಕಾತಿಪ್ರಕರಣ: ಅಕ್ರಮ ಎಸಗಿದವರ ಎದೆಯಲ್ಲಿ ಢವ ಢವ ಶುರು

ಇಡೀ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲಿ ದೊಡ್ಡ ಸದ್ದು ಮಾಡಿದ್ದ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೊನೆಗೂ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ಶಿಟ್ ಸಲ್ಲಿಕೆ ಮಾಡಿದ್ದಾರೆ.. ಇಡೀ ಅಕ್ರಮದ ಕೇಂದ್ರಸ್ಥಾನ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸುದೀರ್ಘವಾಗಿ 2000 ಪುಟಗಳ್ಳುಳ್ಳ ಚಾರ್ಜ್ಶಿಟ್ ಸಲ್ಲಿಸಿದ್ದು ಅಕ್ರಮ ಎಸಗಿದವರ ಎದೆಯಲ್ಲಿ ಢವ ಢವ ಶುರುವಾಗಿದೆ..
ಇಡೀ ರಾಜ್ಯವನ್ನೆ ಅಲ್ಲೋಲ ಕಲ್ಲೋಲ ಮಾಡಿದ್ದ ಮತ್ತು ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಬಾಳಿಗೆ ಕೊಳ್ಳಿ ಇಟ್ಟಿದ್ದ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇಂದು ಸಿಐಡಿ ಅಧಿಕಾರಿಗಳು ಕಲಬುರಗಿಯ ಮೂರನೇ ಜೆಎಮ್ಎಫ್ಸಿ ಕೋರ್ಟ್ಗೆ ಚಾರ್ಜ್ಶಿಟ್ನ್ನ ಸಲ್ಲಿಸಿದ್ದಾರೆ. ಅಕ್ರಮದ ಕೇಂದ್ರಸ್ಥಾನ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಕಲಬುರಗಿ ನಗರದ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು 34 ಜನರನ್ನ ಬಂಧಿಸಿ ವಿಚಾರಣೆ ನಡೆಸಿ ಎಫ್ಐಆರ್ ದಾಖಲಿಸಿ ಜೈಲಿಗಟ್ಟಿತ್ತು..
ಇದೀಗ ಸಿಐಡಿ 34 ಆರೋಪಿಗಳ ವಿರುದ್ಧ ಸುಮಾರು 2000 ಪುಟಗಳ್ಳುಳ್ಳ ಚಾರ್ಜ್ಶಿಟ್ ಸಿದ್ದಪಡಿಸಿದ್ದು, ಇಂದು ಸಿಐಡಿ ತನಿಖಾಧಿಕಾರಿ ಡಿವೈಎಸ್ಪಿ ಪ್ರಕಾಶ ರಾಠೋಡ್ ನೇತೃತ್ವದಲ್ಲಿ ಕಲಬುರಗಿ ಮೂರನೇ ಜೆಎಮ್ಎಫ್ಸಿ ಕೋರ್ಟ್ಗೆ ಬಿಗಿಭದ್ರೆತೆಯಲ್ಲಿ ಚಾರ್ಜ್ಶಿಟ್ನ್ನ ಸಲ್ಲಿಸಿದ್ದಾರೆ.. ಪಿಎಸ್ಐ ಪರೀಕ್ಷಾ ಅಕ್ರಮದ ಕೇಂದ್ರಬಿಂದುವಾಗಿರೋ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಕಲಬುರಗಿ ನಗರದ ಗೋಕುಲ್ ಬಡಾವಣೆಯಲ್ಲಿರುವ ಜ್ಞಾನಜ್ಯೋತಿ ಇಂಗ್ಲಿಷ್ ಮಿಡಿಯಂ ಶಾಲೆಯಲ್ಲಿ ಅಕ್ರಮ ನಡೆದ ಆರೋಪದಡಿ ಏಪ್ರಿಲ್ 10 ರಂದು ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು..
ಎಫ್ಐಆರ್ ದಾಖಲು ಆಗುತ್ತಿದ್ದಂತೆ ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿತ್ತು. ಸಿಐಡಿಗೆ ಪ್ರಕರಣ ಹಸ್ತಾಂತರ ಆದ ಬೆನ್ನಲ್ಲೆ ಏಪ್ರಿಲ್ 16 ರಂದು ಸಿಐಡಿ ಅಧಿಕಾರಿಗಳು ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರ ಕಿಯಾರದ ಸುಮಾ, ಸಿದ್ದಮ್ಮ ಮತ್ತು ಸಾವಿತ್ರಿಯನ್ನ ಬಂಧಿಸಿದ್ದರು. ಮೂವರು ಮೇಲ್ವಿಚಾರಕಿಯನ್ನ ಬಂಧಿಸಿದ್ದ ಬೆನ್ನಲ್ಲೆ ತನಿಖೆ ಚುರುಕುಗೊಳಿಸಿದ ಸಿಐಡಿ ಅಧಿಕಾರಿಗಳು, ಅಕ್ರಮಕ್ಕೆ ಸಂಬಂಧಿಸಿದಂತೆ ಶಾಲೆಯ ಒಡೆತಿ ದಿವ್ಯಾ ಹಾಗರಗಿ, ಪತಿ ರಾಜೇಶ್ ಹಾಗರಗಿ, ಹೆಡ್ಮಾಸ್ಟರ್ ಕಾಶಿನಾಥ್, ಶಿಕ್ಷಕಿ ಅರ್ಚನಾ,
ಕಿಂಗ್ಪಿನ್ಗಳಾದ ಮಂಜುನಾಥ ಮೇಳಕುಂದಿ, ಆರ್ಡಿ ಪಾಟೀಲ್, ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್, ಕೆಎಸ್ಆರ್ಪಿ ಅಸಿಸ್ಟೆಂಟ್ ಕಮಾಂಡೆಂಟ್ ವೈಜಿನಾಥ್ ಬಿರಾದಾರ್, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ ಮೇತ್ರೆ ಸೇರಿದಂತೆ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದ ಸಂಬಂಧಿಸಿದಂತೆ ಬರೋಬ್ಬರಿ 34 ಜನರನ್ನ ಬಂಧಿಸಿ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀದ ಕೋರ್ಟ್ಗೆ ಚಾರ್ಜ್ಶಿಟ್ ಸಲ್ಲಿಕೆಯಾಗಿದ್ದು, ಅಕ್ರಮ ಎಸಗಿ ಶ್ರೀಕೃಷ್ಣನ ಜನ್ಮಸ್ಥಾನದಲ್ಲಿರೋ ಆರೋಪಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ..
ಅದೆನೇ ಇರಲಿ ಇಡೀ ರಾಜ್ಯವನ್ನೆ ಬೆಚ್ಚಿಬಿಳಿಸಿದ್ದ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್ಐ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ಚಾರ್ಜ್ಶಿಟ್ ಸಲ್ಲಿಕೆ ಕಾರ್ಯ ಅಂತ್ಯವಾಗಿದ್ದು, ಲಕ್ಷಾಂತರ ಅಭ್ಯರ್ಥಿಗಳ ಬಾಳನ್ನ ಕತ್ತಲೆಕೂಪಕ್ಕೆ ತಳ್ಳಿರುವ ಆರೋಪಿಗಳಿಗೆ ಕೋರ್ಟ್ ಕಠಿಣ ಶಿಕ್ಷೆ ನೀಡಲಿ ಎಂಬುವುದು ಸಾರ್ವಜನಿಕರ ಮಾತಾಗಿದೆ..