ಆಸ್ತಿ ವಿಚಾರವಾಗಿ ಕೊಲೆಯಾಗಿದೆ ಅನ್ನೋದು ಸುಳ್ಳು: ಸ್ಫೋಟಕ ಸಂಗತಿ ಬಿಚ್ಚಿಟ್ಟ ಆರೋಪಿ ಮಹಾಂತೇಶ್ ಪತ್ನಿ

ಹುಬ್ಬಳ್ಳಿ: ನಮ್ಮ ಮತ್ತು ಗುರೂಜಿ ನಡುವೆ ಒಳ್ಳೆಯ ಸಂಬಂಧ ಇತ್ತು. ನಮ್ಮ ಮನೆಯವರು ಈ ರೀತಿ ಮಾಡಿದ್ದು ತಪ್ಪು ಎಂದು ಕೊಲೆ ಆರೋಪಿ ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಹೇಳಿಕೆ ನೀಡಿದ್ದಾರೆ.
ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ ಸಂಬಂಧ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ವನಜಾಕ್ಷಿ, ಗುರೂಜಿ ನಮ್ಮ ತಂದೆಯಂತೆ ಇದ್ದರು.
ನನಗೆ ಬೇಸರ ಆದಾಗ ಗುರೂಜಿ ಜತೆ ಮಾತನಾಡುತ್ತಿದ್ದೆ. ಬೇನಾಮಿ ಆಸ್ತಿ ವಿಚಾರವಾಗಿ ಕೊಲೆ ನಡೆದಿದೆ ಅನ್ನೋದು ಸುಳ್ಳು ಸುದ್ದಿ ಎಂದು ಹೇಳಿದರು.
ನನ್ನ ಪತಿ ಸರಳವಾಸ್ತುನಲ್ಲಿ ಬಾಂಬೆ ಹೆಡ್ ಆಗಿ ಕೆಲಸ ಮಾಡುತ್ತಿದ್ದರು. ಸಾಲ ಮಾಡಿ ಅಪಾರ್ಟಮೆಂಟ್ನಲ್ಲಿ ಮನೆ ತೆಗೆದುಕೊಂಡಿದ್ದೇವೆ. ನನ್ನ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ. ಕೊಲೆ ವೀಡಿಯೋ ನೋಡಿ ನನ್ನ ಮನಸ್ಸಿಗೆ ನೋವಾಗಿದೆ. ಗುರೂಜಿ ಮೇಲೆ ನಮ್ಮ ಮನೆಯವರಿಗೆ ಇಷ್ಟ್ಯಾಕೆ ಆಕ್ರೋಷ ಅಂತಾ ಗೊತ್ತಾಗ್ತಿಲ್ಲ ಎಂದು ವನಜಾಕ್ಷಿ ತಿಳಿಸಿದರು.
ಗುರೂಜಿ ಅಲ್ಲ ಯಾರಿಗೇ ಆದರೂ ಈ ರೀತಿ ಬರ್ಬರವಾಗಿ ಕೊಲೆ ಮಾಡಬಾರದು. ಪೊಲೀಸರೂ ಸಹ ವಿಚಾರಣೆಗೆ ಕರೆದೊಯ್ದಿದ್ರು. ವಿಚಾರಣೆಗೆ ಸಹಕರಿಸಿದ್ದೇನೆ. ನನ್ನ ಗಂಡ ಮಾಡಿದ್ದು ತಪ್ಪು ಅಂತಾ ವನಜಾಕ್ಷಿ ಹೇಳಿದರು.