ಗ್ರಾಮ ಪಂಚಾಯತಿ ಸದಸ್ಯರೊಬ್ಬರ ಮೇಲೆ ಬಿಜೆಪಿ ಮುಖಂಡ ನಡೆಸಿದ ಹಲ್ಲೆ ಖಂಡಿಸಿ ಸಾರ್ವಜನಿಕರು ಚಿಕ್ಕಜಾಜೂರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಚಿತ್ರದುರ್ಗ: ಗ್ರಾಮ ಪಂಚಾಯತಿ ಸದಸ್ಯರೊಬ್ಬರ ಮೇಲೆ ಬಿಜೆಪಿ ಮುಖಂಡ ನಡೆಸಿದ ಹಲ್ಲೆ ಖಂಡಿಸಿ ಸಾರ್ವಜನಿಕರು ಚಿಕ್ಕಜಾಜೂರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಚಿಕ್ಕಜಾಜೂರು ಗ್ರಾಮ ಪಂಚಾಯತಿ ಸದಸ್ಯ ಸಿದ್ದೇಶ್ ಹಲ್ಲೆಗೆ ಒಳಗಾಗಿದ್ದು, ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಬೆಂಬಲಿಗ ಡಿ.ಸಿ.ಮೋಹನ್ ಹಲ್ಲೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ನ ಸಿದ್ದೇಶ್ ಹಾಗೂ ಬಿಜೆಪಿ ಮುಖಂಡ ಡಿ.ಸಿ.ಮೊಹನ್ ನಡುವೆ ರಾಜಕೀಯ ವೈಷಮ್ಯವಿತ್ತು. ಚಿಕ್ಕಜಾಜೂರಿನ ವೃತ್ತದಲ್ಲಿ ಇಬ್ಬರ ನಡುವೆ ಗುರುವಾರ ಸಂಜೆ ಗಲಾಟೆ ನಡೆದಿದೆ. ಈ ವೇಳೆ ಮೋಹನ್ ಇಟ್ಟಿಗೆಯಿಂದ ಸಿದ್ದೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿದರು. ಆರೋಪಿ ಬಂಧಿಸುವವರೆಗೆ ಠಾಣೆಯ ಆವರಣದಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು. ಟೈರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.