ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ : ಸಂತೋಷ್ ಪಾಟೀಲ್ ಪತ್ನಿ ಆಕ್ರೋಶ

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರನ್ನು ವಿಚಾರಣೆ ಮಾಡದೆ ಕ್ಲೀನ್ ಚಿಟ್ ನೀಡಿರುವದನ್ನು ತೀವ್ರವಾಗಿ ಖಂಡಿಸಿರುವ ಅವರ ಪತ್ನಿ ಜಯಶ್ರೀ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ಮುಚ್ಚಿಹಾಕಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಈ ಪ್ರಕರಣವನ್ನು ಸಿ ಬಿ ಐ ಗೆ ವಹಿಸಬೇಕು. ಇಲ್ಲದಿದ್ದರೆ ನಾವು ಇದನ್ನು ನ್ಯಾಯಾಲಯದಿಂದ ಪ್ರಶ್ನೆ ಮಾಡುತ್ತೇವೆ ಎಂದರು. ಈಶ್ವರಪ್ಪನವರೇ ಆರೋಪಿ ಅಂತಾ ನನ್ನ ಗಂಡ ಡೆತ್ ನೋಟ್ನಲ್ಲಿ ಬರೆದು ಇಟ್ಟಿದ್ದಾರೆ. ಸಂತೋಷ್ ಸಾವಿನ ನಂತರ ಮೂರರಿಂದ ನಾಲ್ಕು ತಾಸು ಫೋನ್ ಆನ್ ಇತ್ತು, ಅದರಲ್ಲಿ ಎಲ್ಲ ಸಾಕ್ಷಿ ಇತ್ತು, ಹೀಗಿರುವಾಗ ಸಾಕ್ಷಾಧಾರಗಳ ಕೊರತೆ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ಈ ಸಾಕ್ಷಿಗಳು ನಾಶ ಆದವಾ ಅಥವಾ ನಾಶಾ ಮಾಡಿದರಾವ ಎಂದು ಅನುಮಾನ ವ್ಯಕ್ತಪಡಿಸಿದ ಅವರು ಪೊಲೀಸರು ಪ್ರಭಾವಿ ರಾಜಕಾರಣಿ ಒತ್ತಡಕ್ಕೆ ಸಿಲುಕಿ ತನಿಖೆ ತಿರಿಚುತ್ತಿದ್ದಾರೆ. ಎಂದು ಒತ್ತಾಯಿಸಿದರು. ನನ್ನ ಗಂಡ ಬರೆದ ಡೆತ್ ನೋಟ್ ಪರಿಗಣಿಸಬೇಕು, ನಾನು ಈಗ ನನ್ನ ಸಾವಿಗೆ ಈಶ್ವರಪ್ಪ ಅವರು ಕಾರಣ ಅಂತಾ ಡೆತ್ ನೋಟ್ ಬರೆಯುತ್ತೇವೆ ಅದನ್ನು ಪರಿಗಣಿಸುತ್ತಾರಾ ಎಂದು ಪ್ರಶ್ನೆ ಮಾಡಿದ ಜಯಶ್ರೀ ಅವರು ಸಂತೋಷ ಡೆತ್ ನೋಟ್ ಕೈಯಲ್ಲಿ ಬರೆದಿಲ್ಲ ಅಂತ ಹೇಳುತ್ತಾರೆ. ನಾನು ಈಗ ಕೈಯಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಅದನ್ನಾದರೂ ಒಪ್ಪುತ್ತಾರಾ ಪೊಲೀಸರು ಎಂದು ಬೇಸರ ಹೊರಹಾಕಿದರು.