ರಾಜಕುಮಾರ್ ಟಾಕಳೆ; ನವ್ಯಶ್ರೀ ರಾವ್ ಪ್ರಕರಣಕ್ಕೆ ಮತ್ತೊಂದು ತಿರುವು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು
ರಾಜಕುಮಾರ ಟಾಕಳೆಯಿಂದ ನನಗೆ ಅನ್ಯಾಯವಾಗಿದೆ. ಈಗಾಗಲೇ ನಾನು ಎರಡು ಬಾರಿ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ.

ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾವ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಟಾಕಳೆ ಹನಿಟ್ರ್ಯಾಪ್ ಕೇಸ್ ಸೇರಿದಂತೆ ತಮಗಾದ ಅನ್ಯಾಯ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ವಿಡಿಯೋ, ಫೋಟೊ ವೈರಲ್ ಆಗುತ್ತವೆ. ನಾನು ಆ ಸಂದರ್ಭದಲ್ಲಿ ವಿದೇಶದಲ್ಲಿ ಇದ್ದೆ. ಭಾರತಕ್ಕೆ ವಾಪಸ್ ಆಗುತ್ತಿದ್ದಂತೆ ಈ ಘಟನೆಗಳ ಬಗ್ಗೆ ತಿಳಿದಿದ್ದು, ಪರಿಶೀಲನೆ ನಡೆಸಿ ದೂರು ಕೊಡುವಷ್ಟರಲ್ಲಿ ರಾಜಕುಮಾರ ಟಾಕಳೆ ರಾತ್ರೋರಾತ್ರಿ ಎಪಿಎಂಸಿ ಠಾಣೆಗೆ ಹೋಗಿ ದೂರು ನೀಡುತ್ತಾರೆ. ನಾನು ಹನಿಟ್ರ್ಯಾಪ್ ಮಾಡಿದ್ದೇನೆ ಎಂದು ಪ್ರಕರಣ ದಾಖಲಿಸಿದ್ದಾರೆ ಎಂದರು.
ರಾಜಕುಮಾರ ಟಾಕಳೆಯಿಂದ ನನಗೆ ಅನ್ಯಾಯವಾಗಿದೆ. ಇತ್ತೀಚೆಗೆ ಬೆಳಗಾವಿಗೆ ಬಂದು ದೂರು ನೀಡುವ ವೇಳೆ ನನ್ನ ಮೇಲೆ ಸಾಕಷ್ಟು ಒತ್ತಡ ಇತ್ತು. ಈಗಾಗಲೇ ನಾನು ಎರಡು ಬಾರಿ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ.
2020 ಮೇ ತಿಂಗಳಲ್ಲಿ ಬೆಂಗಳೂರಿನ ಕುಮಾರ ಕೃಪಾ ಪ್ರವಾಸಿ ಮಂದಿರದ ಹಿಂಬದಿ ಇರುವ ಗಣೇಶ ದೇವಸ್ಥಾನದಲ್ಲಿ ರಾಜಕುಮಾರ್ ಟಾಕಳೆ ಹಾಗೂ ನಾನು ಮದುವೆಯಾಗಿದ್ದೇವೆ. ಆತ ನನ್ನ ಗಂಡ. ಕುಮಾರಕೃಪಾ ಸರಕಾರಿ ಕಟ್ಟಡವನ್ನು ರಾಜಕುಮಾರ ಯಾವ ರೀತಿ ಬಳಕೆ ಮಾಡಿಕೊಂಡಿದ್ದಾನೆ ಎಂಬುದನ್ನು ನ್ಯಾಯಲಯದ ಮುಂದೆ ಹೇಳಿದ್ದೇನೆ ಎಂದರು.
ರಾಜಕುಮಾರ ಟಾಕಳೆಯಿಂದ ನನಗಾದ ನೋವು ಅನ್ಯಾಯ ಮತ್ತೊಂದು ಹೆಣ್ಣಿಗೆ ಆಗಬಾರದು. ಮೊದಲನೇ ಪತ್ನಿ ಇದ್ದರೂ ಎರಡನೇ ಮದುವೆಯಾಗಿದ್ದ ಬಗ್ಗೆ, ಮಾವಿನ ತೋಪಿನಲ್ಲಿ ನನ್ನ ಕಿಡ್ನಾಪ್ ಮಾಡಿರುವ ಪ್ರಕರಣ, ಸಾರ್ವಜನಿಕ ಜೀವನದಲ್ಲಿ ನನ್ನ ಮಾನ ತಗೆದಿರುವುದು, ಅಶ್ಲೀಲ ವಿಡಿಯೋ ಚಿತ್ರಿಕರಣ ಮಾಡಿ ವೆಬ್ ಸೈಟ್ ಗೆ ಮಾರಾಟ ಮಾಡಿರುವ ಬಗ್ಗೆ, ಆತನಿಂದ ನಾನು ಬ್ಲ್ಯಾಕ್ ಮೇಲ್ ಗೊಳಗಾದ ಬಗ್ಗೆ ಸೇರಿ ರಾಜಕುಮಾರ ಟಾಕಳೆ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದರು.