ಪಕ್ಷ ಸಂಘಟಿಸಿ, ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ; ಸತೀಶ್ ಜಾರಕಿಹೊಳಿ ಕರೆ

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಚರ್ಚೆ ಮಾಡುವ ಮೂಲಕ ಪಕ್ಷದ ಸಂಘಟನೆ ಮಾಡಲಾಗುತ್ತಿದೆ. ಚುನಾವಣೆ ಮೊದಲೇ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟಿಸುವ ಕೆಲಸ ನಡೆಯಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಖಾಸಬಾಗದ ಸಾಯಿಸಭಾಭವನದಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಅವರು ಮಾತನಾಡಿದರು. ಈಗಾಗಲೇ ನಮ್ಮ ಪಕ್ಷದ ನಾಯಕರು ಸುಮಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನೂ ಮಾಡಿದ್ದಾರೆ ಎಂದರು.
ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಕಾರ್ಯಕರ್ತರ ಸಮಸ್ಯೆಗಳನ್ನು ಚರ್ಚಿಸಬೇಕು. ಪಕ್ಷದ ನಾಯಕರೇ ಅವುಗಳನ್ನು ಪರಿಹರಿಸುವ ಕೆಲಸವಾಗಬೇಕಿದೆ. ಪದೇ ಪದೆ ಪಕ್ಷದ ಸಭೆ, ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷದ ಸಂಘಟನೆ ಮಾಡಬೇಕು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಎಲ್ಲರೂ ಶ್ರಮಿಸಬೇಕು. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಕ್ತಿಯನ್ನು ಹೆಚ್ಚಿಸಬೇಕು. ಇದು ಅನಿವಾರ್ಯ ಎಂದರು.
ವಿಧಾನಸಭೆ ಚುನಾವಣೆಗಿಂತ ನಾವು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಳ್ಳೆಯ ಮತ ಪಡೆದಿದ್ದೇವೆ. ಬೆಳಗಾವಿ ದಕ್ಷಿಣದಲ್ಲಿ ಎರಡು ಸ್ಥಾನಗಳಲ್ಲಿ ಗೆದ್ದಿದ್ದೇವೆ. ಉತ್ತರ ಕ್ಷೇತ್ರದಲ್ಲಿಯೂ ಅದೇ ರೀತಿಯಾಗಿದೆ. ನಮ್ಮ ಪ್ರಕಾರ ನಾವು ೧೮-೨೦ ಸೀಟ್ ಗೆಲ್ಲಬೇಕಿತ್ತು. ಆದರೆ, ನಮ್ಮಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ನಾವು ಸೋತಿದ್ದೇವೆ. ಇದು ನಮಗೆ ಪಾಠವಾಗಿದೆ. ಲೋಕಸಭೆ ಉಪಚುನಾವಣೆ, ಪಾಲಿಕೆ ಚುನಾವಣೆ ಎದುರಿಸಿರುವುದರಿಂದ ನಮಗೆ ಈಗ ಒಂದು ಅಂದಾಜು ಗೊತ್ತಾಗಿದೆ ಎಂದರು.
ಪದೇ ಪದೆ ಇಂತಹ ಸಭೆ, ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷದ ಕಾರ್ಯಕರ್ತರ ಸಮಸ್ಯೆಗಳು, ಬಡವರು, ನೇಕಾರರು,ಜಿಎಸ್ಟಿ ಸಮಸ್ಯೆ ಕುರಿತು ಚರ್ಚಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಹಾಲು, ಮೊಸರು ಹೀಗೆ ಯಾವುದನ್ನೂ ಬಿಡದೇ ಜಿಎಸ್ಟಿ ವಿಧಿಸಿದ್ದಾರೆ. ಈ ಕುರಿತು ಜನಜಾಗೃತಿ ಮೂಡಿಸಲು ಸಮಾವೇಶ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಬಡವರಿಗೆ ಹೊರೆ ಮಾಡಿದ್ದಾರೆ. ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ,ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಿದ್ದು, ಬೇರೆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ನ ಕಡೆಗೆ ಮುಖ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸರ್ವಜನಾಂಗಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಈಗಾಗಲೇ ತಮ್ಮೆಲ್ಲರಿಗೂ ಗೊತ್ತಿರುವಂತೆ ಈ ದೇಶದ ಇತಿಹಾಸವೇ ಕಾಂಗ್ರೆಸ್ ಪಕ್ಷದ ಇತಿಹಾಸವಾಗಿ ಹೊರಹೊಮ್ಮಿದೆ.
ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಏನು ಮಾಡಿದೆ ಅಂತಾ ಕೇಳುವವರಿಗೆ ನನ್ನ ಉತ್ತರ ಇಷ್ಟೇ, ಈಗೀನ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ, ಕ್ಷಣ ಮಾತ್ರದಲ್ಲಿ ಏನು ಬೇಕಾದರೂ ಅಂತರ್ಜಾಲದ (ಇಂಟರ್ನೆಟ್) ಮೂಲಕ ಪಡೆದುಕೊಳ್ಳಬಹುದಾಗಿದೆ, ಇಂಟರ್ನೆಟ್ ಉಪಯೋಗ ಮಾಡುವ ಮುಖೇನ ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಇವತ್ತು ಎಲ್ಲರು ತಿಳಿದುಕೊಳ್ಳಬೇಕಿದೆ.
ಕಾಂಗ್ರೆಸ್ ಎಂದರೆ ಶಕ್ತಿ, ಹಲವಾರು ಮಹನೀಯರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ತಮ್ಮ ಅಮೋಘವಾದ ಕೊಡುಗೆಯನ್ನು ನೀಡಿ, ಕೊನೆಗೆ ತಮ್ಮ ಜೀವಗಳನ್ನೇ ದೇಶಕ್ಕಾಗಿ ಅರ್ಪಿಸಿದ್ದಾರೆ. ಇವರೆಲ್ಲರ ತ್ಯಾಗ ಬಲಿದಾನಗಳನ್ನು ಸ್ಮರಿಸುವ ಮುಖೇನ ಪಕ್ಷಕ್ಕಾಗಿ ದುಡಿದು ಭವ್ಯ ಭಾರತವನ್ನು ಇನ್ನೂ ಉತ್ತುಂಗಕ್ಕೆ ಏರಿಸುವ ಕೆಲಸವನ್ನು ಮಾಡೋಣ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ. ಮಾಜಿ ಶಾಸಕ ರಮೇಶ ಕುಡಚಿ, ಸುನೀಲ ಹಣಮನ್ನವರ, ರವೀಂದ್ರ ನಾಯ್ಕರ್, ಬಿ.ಎಸ್.ನಾಡಕರ್ಣಿ, ರಾಜ್ಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾದ ಸುನೀಲ ಹನಮನ್ನವರ, ಪ್ರದೀಪ, ವಿನಯ ನಾವಲಗಟ್ಟಿ ಹಾಗೂ ಅನೇಕ ಕಾಂಗ್ರೆಸ್ ಮುಖಂಡರು ಪಕ್ಷದ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.