
ಮಂಗಳೂರು: ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳ ಅವಧಿಯಲ್ಲಿ ಮಸೂದ್ ಮತ್ತು ಪ್ರವೀಣ್ ಹತ್ಯೆಯಾಗಿದ್ದು ಅತ್ಯಂತ ನೋವಿನ ವಿಚಾರ. ಕೊಲೆಗಡುಕರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ.
ಖಾದರ್ ಒತ್ತಾಯಿಸಿದ್ದಾರೆ.
ಸಮಾಜ ಘಾತುಕ ಶಕ್ತಿಗಳು, ಕೊಲೆಗಡುಕರಿಗೆ ಸರ್ಕಾರದ ಭಯವಿಲ್ಲ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಆದಂತಹ ಘಟನೆಗಳೇ ಇದಕ್ಕೆ ಸಾಕ್ಷಿ. ಈ ಸರ್ಕಾರದಲ್ಲಿ ಜನಸಾಮಾನ್ಯರಿಗೆ ರಕ್ಷಣೆ, ನೆಮ್ಮದಿಯ ವಾತಾವರಣ ಇಲ್ಲ ಎಂದು ಅವರು ದೂರಿದರು.
ಈ ಹಿಂದೆ ಆದ ಘಟನೆಯ ಸೂಕ್ಷ್ಮತೆ ಅರಿತುಕೊಂಡು ಮುಂಜಾಗ್ರತೆ ಮಾಡುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯದ್ದು. ಈ ಎಲ್ಲ ಘಟನೆಗಳಿಗೆ ಕಾರಣಕರ್ತರಾದವರನ್ನು ಆದಷ್ಟು ಬೇಗ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮೃತ ಮಸೂದ್ ಮತ್ತು ಪ್ರವೀಣ್ ಅವರ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕೆಂದು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಯವರನ್ನು ಖಾದರ್ ಒತ್ತಾಯಿಸಿದ್ದಾರೆ.
ಎಲ್ಲಾ ಜಾತಿ, ಮತ,ವರ್ಗದವರು ಒಂದಾಗಿ ಯಾರೇ ಸಮಾಜ ಘಾತುಕ ಶಕ್ತಿಗಳು, ಕೊಲೆ ಗಡುಕರು ಆಗಲಿ ಅವರ ವಿರುದ್ಧ ಹೋರಾಡಲು ಒಟ್ಟಾಗಬೇಕು ಮತ್ತು ಇಂತಹ ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ಕೊಡಬೇಕೆಂದು ಮನವಿ ಮಾಡಿದ್ದಾರೆ.