ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ‘ಮಹಾ’ ಡಿಸಿಎಂ!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಚರ್ಚೆ ಮತ್ತೆ ಸುದ್ದಿಯಾಗಿದ್ದು, ಈಗಾಗಲೇ ಸಹಜ ಸಾವಲ್ಲ, ಕೊಲೆ ಎಂದು ಬಹುತೇಕ ಮಂದಿ ಹೇಳುತ್ತಿದ್ದು, ಆದ್ರೆ ಸಾವು ಇನ್ನೂ ನಿಗೂಢವಾಗಿಯೇ ಉಳಿದಿದೆ.
2020 ಜೂನ್ 14ರಂದು ನಿಧನರಾದ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ.
ಆದರೆ ಇನ್ನೂ ಕಾರಣ ಬಹಿರಂಗವಾಗಿಲ್ಲ.
ಇದೀಗ ಮೂರು ವರ್ಷಗಳ ಬಳಿಕ ಸಾವಿಗೆ ಟ್ವಿಸ್ಟ್ ಸಿಕ್ಕಿದೆ. ನಟನ ಸಾವಿನ ಮೂರು ವರ್ಷಗಳ ಬಳಿಕ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳು ಪತ್ತೆಯಾಗಿವೆ ಎಂದಿದ್ದಾರೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಂಡ್ನವೀಸ್.
ತನಿಖೆಯನ್ನು ಮುಂಬೈ ಪೊಲೀಸರು (Mumbai Police) ಹಾಗೂ ಸಿಬಿಐ ತನಿಖೆ ನಡೆಸುತ್ತಲೇ ಇರುವ ನಡುವೆಯೇ ಈಗ ಡಿಸಿಎಂ ಮಹತ್ವದ ಸುಳಿವು ನೀಡಿದ್ದಾರೆ.
ದಿಶಾ ಸಾಲಿಯಾನ್ ಹಾಗೂ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ. ಆದರೆ ಆ ಸಾಕ್ಷ್ಯಗಳು ನಿಖರವೇ, ನಂಬಲರ್ಹವೇ, ಸತ್ಯವಾದುವೇ ಎಂಬ ಪರಿಶೀಲನೆ ನಡೆಯುತ್ತಿವೆ. ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ, ಕೆಲವರ ಹೇಳಿಕೆ ದಾಖಲಿಸಿಕೊಳ್ಳುವುದು ಹಾಗೂ ಸಾಕ್ಷ್ಯಗಳ ಪರಿಶೀಲನೆ ಬಾಕಿ ಇದೆ ಎಂದಿದ್ದಾರೆ. ಇದರಿಂದ ಪ್ರಕರಣದ ತನಿಖೆಗೆ ತಿರುವು ಸಿಗುವ ಸಾಧ್ಯತೆ ಇದೆ. ಪ್ರಕರಣ ಕುರಿತು ಸಾಕಷ್ಟು ಪುರಾವೆಗಳು ಸರ್ಕಾರದ ಬಳಿ ಇವೆ. ಕೆಲವು ಸಾಕ್ಷಗಳನ್ನು ಪೊಲೀಸರಿಗೂ ನೀಡುವಂತೆ ತಿಳಿಸಲಾಗಿದೆ. ಈ ಕುರಿತು ಕೆಲವರಿಂದ ಮಾಹಿತಿ ಸಹ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ಹಾಗೂ ದಿಶಾ ಸಾಲಿಯಾನ್ ಪ್ರಕರಣದ ತನಿಖೆಯಲ್ಲಿ ಅಂತಿಮ ವರದಿ ಇನ್ನೂ ಸಲ್ಲಿಸಿಲ್ಲ, ಈಗಲೂ ತನಿಖೆ ಚಾಲ್ತಿಯಲ್ಲಿದೆ. ಈ ಪ್ರಕರಣಗಳ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡುವ ಸಮಯ ಹತ್ತಿರ ಬಂದಿದೆ, ಮಾತನಾಡುವ ಸಮಯದಲ್ಲಿ ನಾನು ಆ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ. ಈ ಮೂಲಕ ಈ ಸಾವಿನ ಹಿಂದೆ ದೊಡ್ಡ ಕಾರಣವೇ ಇದೆ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದಾರೆ.