ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ದುರಂತ: ಜಲಪ್ರಳಯದ ಭವಿಷ್ಯ ನುಡಿದ ಕೋಡಿಮಠ ಶ್ರೀ

ಹುಬ್ಬಳ್ಳಿ ಜುಲೈ 1: ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಒಂದೆರಡು ರಾಷ್ಟಗಳು ಮುಚ್ಚಿ ಹೋಗಲಿವೆ. ಜನರ ಅಕಾಲ ಮೃತ್ಯು ಆಗುವ ಸೂಚನೆ ಇದೆ. ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ದುರ್ಘಟನೆ ನಡೆಯುತ್ತದೆ. ಆಳುವವರು ಅರಿತರೆ ಗಂಡಾತರದಿಂದ ಪಾರಾಗಬಹುದು ಇಲ್ಲಾ ಕಟ್ಟಿಟ್ಟ ಬುತ್ತಿ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿಗಳು ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಒಂದು ಸರ್ಕಾರ ಬರುತ್ತದೆ. ಸ್ಥಿರ ಸರ್ಕಾರ ಇರುತ್ತದೆ ಅಂತ ಹೇಳಿದ್ದೆ ಅದು ನಿಜ ಆಗಿದೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತದೆ ಜಲಪ್ರಳಯ ಆಗುವ ಲಕ್ಷಣ ಇದೆ ಎಂದರು.
ಕರುನಾಡಿಗೆ ಕೆಲವೊಂದು ಆಪತ್ತು ಇದೆ. ಕೆಲವು ಸಾವು ನೋವುಗಳು ಆಗುತ್ತವೆ. ದೈವ ಕೃಪೆಯಿಂದ ಪಾರಾಗಬಹುದು. ಭಾರತದಲ್ಲಿ ನಾನು ಹೇಳಿದಂತೆ ಒಂದು ಘಟನೆ ಆಗುತ್ತದೆ. ತಪ್ಪಿಸುವಂತದ್ದು, ಆಳುವವರ ಕೈಯಲ್ಲಿದೆ. ಜಗತ್ತಿನ ಸಾಮ್ರಾಟರು ತಲ್ಲಣ ಆಗುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಬಡವರಿಗೆ ಗ್ಯಾರಂಟಿ ವಿಚಾರವಾಗಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಒಳ್ಳೆಯದೇ. ಯಾವ ಹೆಣ್ಣಿಗೆ ಸ್ವಾತಂತ್ರ ಇರಲಿಲ್ಲ. ಅಂತಹ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ ಎಂದು ಅವರು ಸಿದ್ಧರಾಮಯ್ಯನವರ ಸರ್ಕಾರದ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ. ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತದೆ ಎಂದು ಕೊಡಿಮಠದ ಶ್ರೀಗಳು ತಾರ್ಕಿಕವಾಗಿ ಸರ್ಕಾರದ ಭವಿಷ್ಯ ನುಡಿದಿದ್ದಾರೆ.
‘ಲೋಕಸಭಾ ಚುನಾವಣೆ ಬಗ್ಗೆ ಸತ್ಯ ಹೇಳಿದರೇ ನಾನು ಮಠ ತಲುಪುವುದಿಲ್ಲ’
ಲೋಕಸಭಾ ಚುನಾವಣೆ ವಿಚಾರವಾಗಿ ಸತ್ಯವನ್ನು ಹೇಳಿದರೇ ನಾನು ಮಠ ಸೇರುವುದಿಲ್ಲ ಎಂದು ಕೋಡಿಹಳ್ಳಿ ಮಠದ ಶ್ರೀಗಳು ಆತಂಕವನ್ನು ತೋಡಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡುವ ವೇಳೆಯಲ್ಲಿ, ಸತ್ಯಂ ಅಪ್ರಿಯಂ ಅಸ್ಯತಂ ಪ್ರಿಯ. ಸತ್ಯ ಯಾರಿಗೂ ಇಷ್ಟವಾಗುವುದಿಲ್ಲ. ಅಸತ್ಯವೇ ಎಲ್ಲರಿಗೂ ಇಷ್ಟವಾಗುತ್ತದೆ. ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿ ಸತ್ಯ ಹೇಳಿದರೆ ನಾನು ಮಠ ಸೇರುವುದಿಲ್ಲ ಎಂದರು.
ಕಾದು ನೋಡಿ ಏನಾಗುತ್ತದೆ ಸಮಯ ಬಂದಾಗ ಹೇಳುತ್ತೇನೆ. ಈಗ ಇನ್ನೂ ಚುನಾವಣೆ ಬಹಳ ದೂರವಿದೇ ಈಗಲೇ ಸತ್ಯವನ್ನು ಹೇಳಿದರೇ ನಾನು ಮಠ ತಲುಪಲು ಸಾಧ್ಯವಾಗುವುದಿಲ್ಲ ಎಂದು ಆತಂಕ ಹೊರಹಾಕಿದ್ದಾರೆ.
ನಿಜವಾಯ್ತು ರಾಜಕೀಯ ಭವಿಷ್ಯ: ಕೋಡಿಶ್ರೀಗಳು ಹೇಳಿದ ಆ ಒಂದು ಮಾತು..
ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಅವರು ನುಡಿದಂತೆ ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಬಹುಮತ ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಕೋಡಿಶ್ರೀಗಳು ನುಡಿದ ರಾಜಕೀಯ ಭವಿಷ್ಯ ನಿಜವಾಗಿದ್ದು ಅವರ ಮೇಲಿರುವ ನಂಬಿಕೆಗೆ ಮತ್ತಷ್ಟು ಬಲ ಬಂದಿದೆ.