ಯಡಿಯೂರಪ್ಪನವರ ಮೇಲೆ ನನಗೆ ಅಪಾರ ಗೌರವವಿದೆ : ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಮೇಲೆ ಪೋಕ್ಸ್ ಅಡಿ ದೂರು ದಾಖಲಾದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್ ಯಡಿಯೂರಪ್ಪನವರ ಮೇಲೆ ದೂರು ದಾಖಲಾದ ಬಗ್ಗೆ ನನಗೆ ಮಾಹಿತಿ ಇದೆ. ಕಾನೂನು ಪ್ರಕಾರ ಕ್ರಮ ಆಗಲಿದೆ. ಇದರ ಬಗ್ಗೆ ಪಾರದರ್ಶಕ ತನಿಖೆ ಆಗಲಿ. ಯಾವುದು ಸರಿ ಯಾವುದು ತಪ್ಪು ಎಂದು ನಾನು ಹೇಳಲು ಆಗುವುದಿಲ್ಲ. ಯಡಿಯೂರಪ್ಪನವರ ಮೇಲೆ ನನಗೆ ಅಪಾರ ಗೌರವವಿದೆ ಎಂದರು.
ಈ ಪ್ರಕರಣದಲ್ಲಿ ತಾಯಿಯೇ ದೂರು ಕೊಟ್ಟಿದ್ದಾಳೆ. ಯಾರೇ ದೂರು ಕೊಡಲು ಬಂದರೂ ಅದನ್ನು ತೆಗೆದುಕೊಳ್ಳಲೇಬೇಕು. ಅದು ಯಾವುದೇ ಸರ್ಕಾರವಿರಲಿ ದೂರು ತೆಗೆದುಕೊಳ್ಳಲೇಬೇಕು ಎಂದರು.
ಲೋಕಸಭಾ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲಿ ಕೂಡ ಹೆಚ್ಚು ಪೈಪೋಟಿ ಇದೆ. ಇನ್ನೆರಡು ದಿನಗಳಲ್ಲಿ ನಮ್ಮ ಕ್ಷೇತ್ರದ ಟಿಕೆಟ್ ಫೈನಲ್ ಆಗಲಿದೆ ಎಂದರು.
ಈ ಬಾರಿ ಜೋಶಿ ಅವರ ಲೀಡ್ ನೋಡಬೇಕಾದರೆ ಮೋದಿ ಅವರ ಬಗ್ಗೆ ಬರುವ ಪ್ರಚಾರದ ಟಿವಿಗಳನ್ನು ಬಂದ್ ಮಾಡಬೇಕು. ಒಂದು ತಿಂಗಳು ಟಿವಿ ಬಂದ್ ಮಾಡಿ ನೋಡಲಿ. ಟಿವಿಯಲ್ಲಿ ಎರಡೂ ಪಕ್ಷದ ಬಗ್ಗೆ ಸರಿಯಾದ ಸಮಯ ಸಿಗಬೇಕು. ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣ ಜಾಹೀರಾತಿಗೆ ಖರ್ಚು ಮಾಡುತ್ತಿದ್ದಾರೆ. ಆರೂವರೆ ಸಾವಿರ ಕೋಟಿ ಹಣ ಖರ್ಚು ಮಾಡಿದ್ದಾರೆ. ಆದರೆ, ಮಾಧ್ಯಮದವರು ಅದನ್ನೆಲ್ಲ ತೋರಿಸುವುದಿಲ್ಲ ಎಂದರು.
ಬಿಜೆಪಿ ಟಿಕೆಟ್ ಸಿಗದೇ ಇರುವವರು ಕಾಂಗ್ರೆಸ್ ಗೆ ಬರುತ್ತಾರೆ ಎಂಬ ವಿಚಾರ ಗೊತ್ತಿಲ್ಲ. ನಮ್ಮ ಪಕ್ಷದ ಮುಖಂಡರು ಈ ಬಗ್ಗೆ ಚರ್ಚೆ ಮಾಡುತ್ತಾರೆ. ಧಾರವಾಡ ಜಿಲ್ಲೆಯಲ್ಲಿ ಯಾರೂ ಕಾಂಗ್ರೆಸ್ ಗೆ ಬರುವ ಮಾಹಿತಿ ಇಲ್ಲ. ಒಬ್ಬರು ಬಂದಿದ್ದರು. ಅವರನ್ನು ಎಂಎಲ್ಸಿ ಮಾಡಿದ್ದೆವು. ಅವರು ಮತ್ತೆ ವಾಪಸ್ ಹೋದರು ಎಂದು ಪರೋಕ್ಷವಾಗಿ ಜಗದೀಶ ಶೆಟ್ಟರ್ಗೆ ಟಾಂಗ್ ನೀಡಿದರು